Thursday 3 December 2015


#ಹಾಗೇ_ಸುಮ್ಮನೇ #ಕೆಂಡಸಂಪಿಗೆ
ಇಳಿಜಾರು ಹಾದಿಯಿದು ಮುಗಿದಂತೆ ಕಾಣುವುದು
ಹಿಂತಿರುಗಿ ನೋಡಿದರೆ ಅಲ್ಲೊಂದು ತುದಿ,
ಮುಂತಿರುಗಿ ಓಡಿದರೆ ಮುಂದೊಂದು ತುದಿ..!
ಅಂಗಾಲಿಗೆ ಭೂಮಿಯನ್ನೆ ಕಟ್ಟಿಕೊಂಡ ಕಾಲು,
ಎಲ್ಲಿ ಹೋದರೇನು? ಎಲ್ಲಿ ಬಂದರೇನು?
ಎಲ್ಲಿ ನಿಂತರೇನು? ಎಲ್ಲಿ ಕುಂತರೇನು?
ಎರಡು ತುದಿಗಳ ನಡುವೆ ಗೆರೆಯನೆಳೆದರೆ ದಾರಿ
ನೂರು ಗುರಿಗಳ ನಡುವೆ ಅಡಗಿ ಕೂತಿದೆ ಗೋರಿ.
ಮುಗಿಯೆತೆನ್ನುವ ಪಯಣ ಇಲ್ಲ ಎಲ್ಲೂ,
ಆದಿ ಅಂತ್ಯಗಳೆರಡು ಸುಳ್ಳೆ ಸುಳ್ಳು.
ಅಂಗಾಲಿಗೆ ಕೆಂಡವನ್ನೆ ಕಟ್ಟಿಕೊಂಡ ಕಾಲು,
ಎಲ್ಲಿ ನಿಂತರೇನು? ಎಲ್ಲಿ ಕುಂತರೇನು?
ಎಲ್ಲಿ ಹೋದರೇನು? ಎಲ್ಲಿ ಬಂದರೇನು?
ಊರು ಊರಿನ ನಡುವೆ ಟಾರು ಹುಯ್ದವರಾರು?
ಮೈಲಿಗಲ್ಲನು ಊರಿ ಊರು ಅಂದವರಾರು?

ಯಾರ ತೋರ ಬೆರಳ ನಂಬಿ ಬಂದೆವು?
ನಾವೇ ನಮ್ಮ ನೆರಳ ಎಂದೋ ಕೊಂದೆವು!

ಎಲ್ಲಾ ಪಯಣದ ದಿಕ್ಕು ಮಣ್ಣು ಎಂದಮೇಲೆ,
ಜೀವವಿದ್ದರೇನು? ಇಲ್ಲದಿದ್ದರೇನು?
ದಾರಿ ಎಂದರೇನು? ದಿಕ್ಕು ಎಂದರೇನು?

-ಯೋಗರಾಜ್ ಭಟ್

#ಲಕ್ಕಿ_ಗರ್ಲ್

No comments:

Post a Comment